ವಾಡಿ: ಅಧಿಕಾರಿಗಳು ಗುತ್ತಿಗೆದಾರರ ಕೈಗೊಂಬೆಯಾಗುವ ಅವಶ್ಯಕತೆ ಇಲ್ಲ. ಗುತ್ತಿಗೆದಾರರನ್ನು ಹತೋಟಿಯಲ್ಲಿ ಇಟ್ಟುಕೊಂಡು ಗುಣಮಟ್ಟದ ಕಾಮಗಾರಿಗೆ ಶ್ರಮಿಸಬೇಕು. ಯಾರಾದರೂ ಅಭಿವೃದ್ಧಿಗೆ ಅಡ್ಡಿಪಡಿಸಿದರೆ ನನ್ನ ಗಮನಕ್ಕೆ ತನ್ನಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆದೇಶಿಸಿದರು.
ಮಂಗಳವಾರ ಚಿತ್ತಾಪುರ ತಾಲೂಕು ಪ್ರಜಾಸೌಧ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು. ಒಂದು ಹಳ್ಳಿಗೆ ಒಂದು ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದೇನೆ. ಹಾಣಾದಿ ರಸ್ತೆ, (ಸಂಪರ್ಕ ರಸ್ತೆ, UGD)ಗಳಿಗೆ 47 ಕೋಟಿ ಬಂದಿದೆ. ಸಣ್ಣ ಕೆಲಸ ಎಂದು ಕಳಪೆ ಮಟ್ಟದಲ್ಲಿ ಮಾಡಿದರೆ ಕ್ರಮಕೈಗೊಳ್ಳಿ. ನಮ್ಮ ಸರ್ಕಾರ ಇರುವ ವರೆಗೆ ಯಾರ ಮುಲಾಜಿಗೂ ಬೀಳಬೇಡಿ. ಗುತ್ತಿಗೆದಾರರನ್ನು ಹತೋಟಿಯಲ್ಲಿ ಇಟ್ಟುಕೊಂಡು ಕೆಲಸ ಮಾಡಿಸಿ ಎಂದು ಸೂಚಿಸಿದರು.
ತಾಲೂಕಿನಲ್ಲಿ ನನೆಗುದಿಗೆ ಬಿದ್ದಿರುವ ಸಮುದಾಯ ಭವನಗಳ ಪಟ್ಟಿ ಕೊಡಿ. ಬಾಕಿ ಅನುದಾನ ಕೊಟ್ಟು ಮೇ ಒಳಗಾಗಿ ಪೂರ್ಣಗೊಳಿಸುತ್ತೇನೆ. ತಾಲೂಕಿನ ವಿವಿಧ ಮಠಗಳಿಗೆ 8.5 ಕೋಟಿ ರೂ. ಕೊಡಲಾಗಿದೆ. 16 ಕೋಟಿ ರೂ. ಹಣ ಶಾಲೆಗಳ ಅಭಿವೃದ್ಧಿಗೆ ಮೀಸಲಿದೆ. ಪ್ರಗತಿಪಥ ಯೋಜನೆಯಡಿ ಚಿತ್ತಾಪುರಕ್ಕೆ 110 ಕಿ.ಮೀ ರಸ್ತೆ ಮಂಜೂರಾಗಿದೆ. 100 ರೂ. ವ್ಯಚ್ಚದ ಕಾಮಗಾರಿ ಗುತ್ತಿಗೆದಾರರು 80 ರೂ. ಬೀಡ್ ಮಾಡುತ್ತಿದ್ದಾರಂತೆ. ಅವರು ಲಾಭ ಇಲ್ಲದೆ ಕೆಲಸ ಮಾಡಲ್ಲ. ಹಾಗಾದರೆ ಕಡಿಮೆ ಹಣಕ್ಕೆ ಟೆಂಡರ್ ಹಾಕುತ್ತಿದ್ದಾರೆ. ಇದು ಗುಣಮಟ್ಟದ ಕಾಮಗಾರಿಯನ್ನು ಖಾತ್ರಿಪಡಿಸುವುದಿಲ್ಲ. ನನ್ನ ಕ್ಷೇತ್ರದಲ್ಲಿ ಕಳಪೆ ಕಾಮಗಾರಿ ನಡೆಯುವುದನ್ನು ನಾನು ಸಹಿಸುವುದಿಲ್ಲ. ತಾಲೂಕಿನಾದ್ಯಂತ ನಿರ್ಮಿಸಲು 400 ಶೌಚಾಲಯ ಕೊಟ್ಟಿದ್ದೇನೆ. ಒಂದು ಶೌಚಾಲಯಕ್ಕೆ 30 ಲಕ್ಷ ರೂಪಾಯಿ ಮೀಸಲಿಟ್ಟಿದ್ದೇನೆ. ಜಾಗ ಇಲ್ಲ ಎಂದು ಕೈಕಟ್ಟಿ ಕುಳಿತರೆ ಏನು ಪ್ರಯೋಜನ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Share