ಜ್ಯೋತಿಷಿ ಮಾತು ಕೇಳಿ ಹೆತ್ತ ತಾಯಿಯನ್ನೇ ಕೊಂದ ಸುಚಿತ್ರಾ!

Share
0Shares

ತುಮಕೂರು: ಹೆತ್ತ ತಾಯಿಯನ್ನ ಮಗಳು ಕೊಲೆ ಮಾಡಿರುವ ಅಮಾನವೀಯ ಘಟನೆ ತಾಲೂಕಿನ ಅನುಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜ್ಯೋತಿಷಿಯೊಬ್ಬನ ಮಾತು ನಂಬಿದ ಮಗಳು ತಲೆದಿಂಬಿನಿಂದ ಉಸಿರುಗಟ್ಟಿಸಿ ಹೆತ್ತ ತಾಯಿಯನ್ನು ಹತ್ಯೆ ಮಾಡಿದ್ದಾಳೆ. ಬಳಿಕ ಅಸಹಜ ಸಾವು ಎಂದು ಬಿಂಬಿಸಲು ಯತ್ನಿಸಿ ಅಂತ್ಯಕ್ರಿಯೆಗೆ ಮುಂದಾಗಿದ್ದಾಳೆ. ಆದರೆ ಗ್ರಾಮಸ್ಥರ ಅನುಮಾನದಿಂದ ಸತ್ಯ ಹೊರಬಂದಿದೆ.

ಮೃತ ಮಹಿಳೆಯನ್ನು ಪುಪ್ಪವತಿ (55) ಎಂದು ಗುರುತಿಸಲಾಗಿದೆ. ಈ ಕೊಲೆ ಕೃತ್ಯ ಎಸಗಿದ ಆರೋಪಿ ಅವರ ಮಗಳಾದ ಸುಚಿತ್ರಾ (33). ಸುಚಿತ್ರಾ ತುಮಕೂರು ನಗರದ ಶ್ರೀನಗರದಲ್ಲಿ ತನ್ನ ಗಂಡನೊಂದಿಗೆ ವಾಸವಿದ್ದು, ಕೆಲ ದಿನಗಳ ಹಿಂದೆ ಅನುಪನಹಳ್ಳಿ ಗ್ರಾಮದಲ್ಲಿರುವ ತಾಯಿಯ ಮನೆಗೆ ಬಂದಿದ್ದಳು ಎನ್ನಲಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು ಒಂದೂವರೆ ವರ್ಷಗಳ ಹಿಂದೆ ಸುಚಿತ್ರಾಳ ತಂದೆ ನಿಧನರಾಗಿದ್ದರು. ಈ ಸಾವಿಗೆ ತಾಯಿ ಪುಪ್ಪವತಿ ಕಾರಣ ಎನ್ನುವ ಶಂಕೆಯನ್ನು ಜ್ಯೋತಿಷ್ಯಿ ವ್ಯಕ್ತಪಡಿಸಿ ಸುಚಿತ್ರಾಗೆ ಹೇಳಿದ್ದಾನೆ. ತಂದೆ ಸಾವಿಗೆ ನಿಮ್ಮ ತಾಯಿ ಮಾಟ ಮಾಡಿಸಿದ್ದಾಳೆ ಎಂಬ ಜ್ಯೋತಿಷ್ಯದ ಮಾತುಗಳನ್ನು ಸುಚಿತ್ರಾ ನಂಬಿದ್ದಾಳೆ. ಇದೇ ಕಾರಣದಿಂದ ತಾಯಿಯ ಮೇಲಿನ ದ್ವೇಷ ಬೆಳೆಸಿಕೊಂಡು ಕೊಲೆ ಮಾಡಲು ನಿರ್ಧರಿಸಿದ್ದಾಳೆ.

ಘಟನೆ ನಡೆದ ದಿನ ರಾತ್ರಿ, ಪುಪ್ಪವತಿ ಮನೆಯೊಳಗೆ ನಿದ್ರಿಸುತ್ತಿದ್ದ ವೇಳೆ ಸುಚಿತ್ರಾ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ತಾಯಿಯು ಮೃತಪಟ್ಟ ನಂತರ, ಈ ಸಾವನ್ನು ಸಹಜವಲ್ಲದೆ ಅಸಹಜ ಸಾವು ಎಂದು ಬಿಂಬಿಸಿ, ಅಂತ್ಯಕ್ರಿಯೆ ನಡೆಸಲು ಮಗಳು ಮುಂದಾಗಿದ್ದಳು.

ಆದರೆ ಮೃತದೇಹದ ಸ್ಥಿತಿ ಹಾಗೂ ಸಂದರ್ಭಗಳನ್ನು ಗಮನಿಸಿದ ಗ್ರಾಮಸ್ಥರು ಇದು ಅಸಹಜ ಸಾವು ಅಲ್ಲ, ಕೊಲೆ ಆಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದರು. ಕೂಡಲೇ ಕ್ಯಾತಸಂದ್ರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಸುಚಿತ್ರಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆಯ ವೇಳೆ ಸುಚಿತ್ರಾ ತಾನೇ ತಾಯಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇದರೊಂದಿಗೆ ಪ್ರಕರಣದ ಭೀಕರ ಸತ್ಯ ಬೆಳಕಿಗೆ ಬಂದಿದೆ.

Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282