ಜೌನ್ಪುರ: ವಿದ್ಯಾರ್ಥಿಯೊಬ್ಬ ದಿವ್ಯಾಂಗ ಕೋಟಾದಡಿ ಎಂಬಿಬಿಎಸ್ ಗೆ ಪ್ರವೇಶ ಪಡೆಯಲು ಕಾಲು ಕತ್ತರಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಜೌನ್ಪುರದಲ್ಲಿ ನಡೆದಿದೆ. ದಿವ್ಯಾಂಗ ಕೋಟಾದ ಮೂಲಕ ಎಂಬಿಬಿಎಸ್ ಕೋರ್ಸ್ನಲ್ಲಿ ಸೀಟು ಪಡೆಯಲು ವಿದ್ಯಾರ್ಥಿಯೊಬ್ಬ ತನ್ನ ಕಾಲಿನ ಒಂದು ಭಾಗವನ್ನು ಕತ್ತರಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ.
ವರದಿಯ ಪ್ರಕಾರ, ಆರಂಭದಲ್ಲಿ ಕೆಲವು ವ್ಯಕ್ತಿಗಳಿಂದ ಹಲ್ಲೆಗೊಳಗಾದ ಕಥೆಯನ್ನು ಹೆಣೆದು, ತನ್ನ ಹೆತ್ತವರನ್ನು ಮತ್ತು ಪೊಲೀಸರನ್ನು ಸಹ ಮೋಸಗೊಳಿಸಿದ್ದಾನೆ. ಲೈನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸೂರಜ್ ಭಾಸ್ಕರ್ ಎಂದು ಗುರುತಿಸಲಾದ ವ್ಯಕ್ತಿ ತನ್ನ ಎಡಗಾಲಿನ ನಾಲ್ಕು ಬೆರಳುಗಳನ್ನು ಕತ್ತರಿಸಿ, ಹೆಬ್ಬೆರಳು ಮಾತ್ರ ಹಾಗೆಯೇ ಉಳಿಸಿದ್ದಾನೆ ಎಂದು ವರದಿಯಾಗಿದೆ. ಈ ಕೃತ್ಯದ ಬಗ್ಗೆ ತನ್ನ ಗೆಳತಿಗೂ ತಿಳಿಸಿದ್ದು, ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸೂರಜ್ ಖಲೀಲ್ಪುರದ ನಿವಾಸಿಯಾಗಿದ್ದು, ತನ್ನ ತಾಯಿ, ಅಣ್ಣ ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದಾನೆ. ಸೂರಜ್ನ ಅಣ್ಣ ಉದ್ಯೋಗದಲ್ಲಿದ್ದರೆ, ಸೂರಜ್ ಡಿ-ಫಾರ್ಮಾ ಪದವಿ ಪಡೆದಿದ್ದು, ಪರೀಕ್ಷೆ ಬರೆಯಲು ಮತ್ತು ಎಂಬಿಬಿಎಸ್ಗೆ ಪ್ರವೇಶಿಸಲು ತಯಾರಿ ನಡೆಸುತ್ತಿದ್ದ. ಜನವರಿ 18 ರ ಸಂಜೆ ಮನೆ ನಿರ್ಮಾಣ ಹಂತದಲ್ಲಿದ್ದ ಕಾರಣ ಸೂರಜ್ ಮನೆಯಲ್ಲಿ ಒಬ್ಬಂಟಿಯಾಗಿದ್ದ. ಮರುದಿನ ಬೆಳಗ್ಗೆ, ಸೂರಜ್ನ ಕತ್ತರಿಸಿದ ಕಾಲು ಪತ್ತೆಯಾಗಿದ್ದು, ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆರಂಭದಲ್ಲಿ, ಸೂರಜ್ ಪೊಲೀಸರಿಗೆ ನೀಡಿದ ವರದಿಯ ಪ್ರಕಾರ, ಮಧ್ಯರಾತ್ರಿಯ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ತನ್ನ ಮೇಲೆ ಹಲ್ಲೆ ನಡೆಸಿ, ಪ್ರಜ್ಞೆ ತಪ್ಪಿಸಿ, ಕಾಲಿನ ಬೆರಳನ್ನು ಕತ್ತರಿಸಿ, ನಂತರ ಅಲ್ಲೇ ಬಿಟ್ಟು ಹೋಗಿದ್ದಾರೆ. ಅಲ್ಲದೆ, ಪಕ್ಕದ ಪ್ರದೇಶದ ಬಳಿ ದೀಪಗಳನ್ನು ಆನ್ ಮಾಡುವ ವಿವಾದದ ಕುರಿತು ತನಗೆ ಈ ಹಿಂದೆ ಬೆದರಿಕೆ ಕರೆಗಳು ಬಂದಿದ್ದವು ಎಂದು ಸೂರಜ್ ವರದಿ ಮಾಡಿದ್ದಾರೆ. ಸೂರಜ್ ವರದಿಯ ನಂತರ, ಅಧಿಕಾರಿಗಳು ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿದ್ದಾರೆ.
ಕರೆ ವಿವರ ದಾಖಲೆಗಳು ಮತ್ತು ಅಪರಾಧ ದೃಶ್ಯ ವಿಶ್ಲೇಷಣೆಯನ್ನು ಒಳಗೊಂಡ ಸರಿಯಾದ ತನಿಖೆಯಿಂದ ಇದು ಬಹಿರಂಗವಾಯಿತು. ಅಪರಾಧ ಸ್ಥಳದಲ್ಲಿ ಅವರು ಸಿರಿಂಜ್ಗಳು, ಅರವಳಿಕೆ ಮಾತ್ರೆಗಳು ಮತ್ತು ಕತ್ತರಿಸುವ ಯಂತ್ರವನ್ನು ಕಂಡಿದ್ದಾರೆ.
ಪೊಲೀಸರು ಸೂರಜ್ನಿಂದ ಡೈರಿಯನ್ನು ವಶಪಡಿಸಿಕೊಂಡಾಗ ಅಪರಾಧ ಬಯಲಾಯಿತು, ಅದರಲ್ಲಿ ಅವರು 2026 ರಲ್ಲಿ ಯಾವುದೇ ಬೆಲೆ ತೆತ್ತಾದರೂ ಎಂಬಿಬಿಎಸ್ ಕೋರ್ಸ್ ಪಡೆಯುವ ದೃಢಸಂಕಲ್ಪ ಮಾಡಿದ್ದ. ತನಿಖೆಯ ಪ್ರಕಾರ 2025 ರ ಅಕ್ಟೋಬರ್ನಲ್ಲಿ ಅಂಗವೈಕಲ್ಯ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಲು ಬಿಎಚ್ಯುಗೆ ಹೋಗಿದ್ದ, ಆದರೆ ಆತನ ದೇಹದ ಯಾವ ಭಾಗವೂ ಊನವಾಗಿರದ ಕಾರಣ ಕೊಟ್ಟು ಅದನ್ನು ತಿರಸ್ಕರಿಸಲಾಗಿತ್ತು.
Share