ಹಾಸನ: ಹೋರಾಟ ಮಾಡುವ ಶಕ್ತಿ ನನ್ನ ಕಾಲಲ್ಲಿ ಇಲ್ಲ, ಆದರೆ ತಲೆಯಲ್ಲಿ ಇದೆ. ನಾನು ನನ್ನ ಜೀವನದಲ್ಲಿ ಎಂದೂ ಸುಳ್ಳು ಹೇಳಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದರು.
ಹಾಸನದಲ್ಲಿ ನಡೆದ ಜೆಡಿಎಸ್ ಪೂರ್ವಭಾವಿ ಸಭೆಯಲ್ಲಿ ದೇವೇಗೌಡರು ಭಾವನಾತ್ಮಕ ಹಾಗೂ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಿದರು.
“ಹಾಸನ ಜಿಲ್ಲೆ ನಮ್ಮನ್ನು ಹುಟ್ಟಿಸಿ, ಬೆಳೆಸಿದ ನೆಲ. 1962ರಿಂದ 2025ರವರೆಗೆ ಈ ಜಿಲ್ಲೆಯ ಜನರು ನಮ್ಮನ್ನು ಬೆಳೆಸಿದ್ದಾರೆ. ನಮ್ಮಪ್ಪ ಸಾಮಾನ್ಯ ರೈತ. ನಾನು ಅವರ ಎರಡನೇ ಹೆಂಡತಿಯ ಮೊದಲ ಮಗ. ಮೊದಲ ಹೆಂಡತಿಯ ಮಕ್ಕಳು ಹಾಗೂ ಅವರೆಲ್ಲರೂ ಕಾಲವಾಗಿದ್ದರು. ನನ್ನ ಬದುಕಿನ ಬಗ್ಗೆ ನಮ್ಮಪ್ಪನಿಗೆ ಭಯವಿತ್ತು. ನನ್ನ ಆರೋಗ್ಯಕ್ಕಾಗಿ ಕುಟುಂಬಸ್ಥರು ಮತ್ತು ಕಾರ್ಯಕರ್ತರು ಹಲವು ಸಲ ಪ್ರಾರ್ಥನೆ ಮಾಡಿದ್ದಾರೆ. ನನ್ನ ಅಳಿಯ ಡಾ.ಮಂಜುನಾಥ್ ನನ್ನನ್ನು ಉಳಿಸಲು ಬಹಳಷ್ಟು ಪ್ರಯತ್ನಿಸಿದ್ದಾರೆ. ರೇವಣ್ಣ ನನ್ನ ಆಯಸ್ಸಿಗಾಗಿ ಎಷ್ಟೋ ಪೂಜೆ ಮಾಡಿಸಿದ್ದಾರೆ. ನೀವು ಎಲ್ಲರೂ ನನ್ನ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದ್ದೀರಿ, ಇದನ್ನು ನಾನು ಎಂದಿಗೂ ಮರೆಯುವುದಿಲ್ಲ” ಎಂದರು.
“ಈಗ ಹೋರಾಟ ಮಾಡುವ ಶಕ್ತಿ ಕಾಲಲ್ಲಿ ಇಲ್ಲ, ಆದರೆ ತಲೆಯಲ್ಲಿ ಇದೆ. ಜಿಲ್ಲೆಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ರೇವಣ್ಣ ಕಾರಣ” ಎಂದ ದೇವೇಗೌಡರು, “ನಾನು ಆಕಸ್ಮಿಕವಾಗಿ ಪ್ರಧಾನಿಯಾದೆ. ಎಂದಿಗೂ ಆ ಸ್ಥಾನದ ಕನಸು ಕಾಣಲಿಲ್ಲ. ಜೆ.ಹೆಚ್.ಪಟೇಲ್ ಅವರಿಗೆ ಕುಮಾರಸ್ವಾಮಿಯನ್ನು ಮಂತ್ರಿ ಮಾಡು ಎಂದು ಹೇಳಿದ್ದೆ. ಆದರೆ ಅವರು ರೇವಣ್ಣನಿಗೆ ಕರೆ ಮಾಡಿ, ಪ್ರಮಾಣವಚನ ಸ್ವೀಕರಿಸಲು ಹೇಳಿದರು” ಎಂದು ನೆನೆದರು.
