ಬೆಂಗಳೂರು: ನಗರದಲ್ಲಿ ನಡೆದ ಬಹು ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಎಟಿಎಂಗಳಿಗೆ ಹಣ ಹಾಕುವ ಮಾಹಿತಿಯನ್ನು ದರೋಡೆಕೋರರಿಗೆ ನೀಡಲಾಗಿದೆ. ಅದನ್ನಾಧರಿಸಿ ದರೋಡೆ ಮಾಡಲಾಗಿದೆ. ಈ ದರೋಡೆ ಮಾಡಿದವರ್ಯಾರು? ಎಟಿಎಂಗೆ ಹಣ ತಂದು ಹಾಕುವ ಮಾಹಿತಿ ನೀಡಿದ್ದು ಯಾರು? ಹಣ ಹಾಕುವವರಲ್ಲಿ ಯಾರಾದರೂ ಮಾಹಿತಿ ನೀಡಿದ್ದಾರೆಯೇ ಅಥವಾ ದರೋಡೆಯಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಕುರಿತಂತೆ ಮಾಹಿತಿಗಳು ದೊರೆತಿವೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ದರೋಡೆಕೋರರನ್ನು ಬಂಧಿಸುತ್ತೇವೆ ಎಂದರು.
ಬೆಂಗಳೂರಿನಲ್ಲಿ ಹಾಡುಹಗಲೇ ಈ ರೀತಿಯ ಕೃತ್ಯ ಎಸಗಿದ್ದಾರೆ. 7 ಕೋಟಿ ರು.ಗೂ ಹೆಚ್ಚಿನ ಮೊತ್ತದ ರಾಬರಿ ಮಾಡಲಾಗಿದೆ. ದರೋಡೆಗೆ ಬಳಸಿದ ವಾಹನ ಸಂಖ್ಯೆ ಸೇರಿದ ಹಲವು ಮಾಹಿತಿ ಸಿಕ್ಕಿದೆ. ದರೋಡೆ ಎಸಗಿದವರು ರಾಜ್ಯದವರಾ ಅಥವಾ ಹೊರ ರಾಜ್ಯದವರಾ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ. ತನಿಖೆಗೆ ಅಡ್ಡಿಯಾಗುವುದರಿಂದ ಈಗಲೇ ಎಲ್ಲ ಮಾಹಿತಿ ಬಹಿರಂಗ ಮಾಡಲಾಗದು. ದರೋಡೆಕೋರರನ್ನು ಖಂಡಿತ ಹಿಡಿಯುತ್ತೇವೆ ಎಂದರು
