ಅಯೋಧ್ಯೆ: ರಾಮ ಮಂದಿರದಲ್ಲಿ ಭಕ್ತರು ನೀಡಿದ ಕಾಣಿಕೆಯನ್ನು ಕಳ್ಳತನ ಮಾಡಿದ ಆರೋಪದ ಪ್ರಕರಣ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಈ ಕುರಿತು ತನಿಖೆ ತೀವ್ರಗೊಳಿಸಿದೆ. ಇದರ ನಡುವೆ, ರಾಮ ಮಂದಿರಕ್ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ನೇಮಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಂದಿರದ ಮೊದಲ ಸಿಇಒ ಹುದ್ದೆಗೆ ಸೋಮವಾರ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಜುಲೈ 18ರಂದು ಅಂತಿಮ ದಿನ ನಿಗದಿಪಡಿಸಲಾಗಿದೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಸ್ಟ್, ನಿಗದಿತ ಕೊನೆ ದಿನಾಂಕದ ಸಂಜೆ 4 ಗಂಟೆಯವರೆಗೂ ಅಭ್ಯರ್ಥಿಗಳು ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ತಿಳಿಸಿದೆ. ದೇವಾಲಯದ ಕಾಣಿಕೆ ಹಣ ಮತ್ತು ಇತರ ಬೆಲೆ ಬಾಳುವ ವಸ್ತುಗಳ ದುರುಪಯೋಗದ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ಮಹತ್ವದ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.
ಸಿಇಒ ಭಕ್ತರ ನಂಬಿಕೆ ಕಾಪಾಡಲಿ: ಈ ಕುರಿತಂತೆ ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿರುವ ರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ, “ಮಂದಿರದ ಪ್ರಥಮ ಸಿಒಇ ಆಗಲಿರುವವರು ಅವರ ಅಧಿಕಾರ ಮತ್ತು ಕರ್ತವ್ಯಗಳನ್ನು ವ್ಯಾಖ್ಯಾನಿಸುವ ಸಂಪೂರ್ಣ ಹಕ್ಕು ಕೇವಲ ಟ್ರಸ್ಟ್ಗೆ ಮಾತ್ರ ಇರುತ್ತದೆ. ಟ್ರಸ್ಟ್ ಮೇಲೆ ಭಕ್ತರು ಇಟ್ಟಿರುವ ನಂಬಿಕೆಯನ್ನು ಕಾಪಾಡುವುದರ ಜೊತೆಗೆ ದೇವಾಲಯ ಆಡಳಿತವನ್ನು ಪಾರದರ್ಶಕವಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ಅವರ ಮೇಲಿರುತ್ತದೆ” ಎಂದು ಹೇಳಿದ್ದಾರೆ.
