ನವದೆಹಲಿ: ವಯನಾಡಿನಲ್ಲಿ ನಡೆದ ಭೂಕುಸಿತ ದುರಂತದ ಬಳಿಕ ಕಾಂಗ್ರೆಸ್ ಪಕ್ಷವು ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಇದುವರೆಗೆ ದುರಂತ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಿ.ಆರ್. ಕೇಶವನ್ ಟೀಕಿಸಿದ್ದಾರೆ.
ಜುಲೈ 7ರಂದು ಕೇರಳದ ವಯನಾಡ್ ಜಿಲ್ಲೆಯ ಅನಕ್ಕಂಪೊಯಿಲ್-ಮೆಪ್ಪಾಡಿ ಅವಳಿ ಸುರಂಗ ಯೋಜನೆ ಕಾಮಗಾರಿ ನಡೆಯುತ್ತಿದ್ದ ವೇಳೆ ಭೂಕುಸಿತ ಸಂಭವಿಸಿತ್ತು. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಎಂಟಕ್ಕೆ ಏರಿದೆ. ರಕ್ಷಣಾ ತಂಡಗಳು ಕೊನೆಯ ವ್ಯಕ್ತಿಯ ಮೃತದೇಹವನ್ನು ಪತ್ತೆಹಚ್ಚಿದ ಬಳಿಕ ಶೋಧ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿವೆ.
ಈ ಬೆಳವಣಿಗೆಯ ನಡುವೆ ಎಕ್ಸ್ (X)ನಲ್ಲಿ ಪೋಸ್ಟ್ ಮಾಡಿರುವ ಸಿ.ಆರ್. ಕೇಶವನ್, ಪ್ರಿಯಾಂಕಾ ಗಾಂಧಿ ದುರಂತ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿಲ್ಲ. ಮೃತಪಟ್ಟವರ ಕುಟುಂಬಗಳನ್ನು ಕೂಡ ಭೇಟಿಯಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿರುವುದನ್ನು ಬಿಟ್ಟರೆ, ಸಂತ್ರಸ್ತರ ಜೊತೆ ನಿಲ್ಲುವ ಕೆಲಸ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
