ತಿರುವನಂತಪುರಂ:ಬಿಜೆಪಿ ಹಾಗೂ ಆರ್ಎಸ್ಎಸ್ ದೇವಾಲಯಗಳನ್ನು ಸಂಘದ ಹಣ ಸಂಗ್ರಹ ಕೇಂದ್ರಗಳನ್ನಾಗಿ ಪರಿವರ್ತಿಸಿವೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಪವನ್ ಖೇರಾ ಸೋಮವಾರ (ಜು.13) ಆರೋಪಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಐಸಿಸಿ (AICC) ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಖೇರಾ, ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಹಾಗೂ ದೇವರ ಕಾಣಿಕೆಯಾಗಿ ತಮ್ಮ ದುಡಿಮೆಯ ಹಣ, ಚಿನ್ನಾಭರಣ ಮತ್ತು ಅಮೂಲ್ಯ ವಸ್ತುಗಳನ್ನು ದೇಣಿಗೆಯಾಗಿ ನೀಡಿದ ಲಕ್ಷಾಂತರ ಭಕ್ತರ ಪರವಾಗಿ ಕಾಂಗ್ರೆಸ್ ಈ ವಿಷಯವನ್ನು ಎತ್ತಿಹಿಡಿಯಲಿದೆ .ಅಯೋಧ್ಯೆಯ ಹುಂಡಿಯ ದೇಣಿಗೆ ಕಳವು ಪ್ರಕರಣ ಭಕ್ತಿಯ ಹೆಸರಿನಲ್ಲಿ ರೂಪುಗೊಂಡಿರುವ ಕಳ್ಳತನದ ವ್ಯವಹಾರ ಮಾದರಿಯ ಪ್ರತಿಬಿಂಬ ”ಎಂದು ಟೀಕಿಸಿದರು.
”ಈ ಕಳವು ಹಗಲು ದರೋಡೆ. ಕೇವಲ ಭಕ್ತರ ಕಾಣಿಕೆಗಳ ಕಳುವಲ್ಲ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮೇಲಿನ ಜನರ ನಂಬಿಕೆ, ವಿಶ್ವಾಸ ಮತ್ತು ಭಕ್ತಿಯ ದರೋಡೆಯಾಗಿದೆ” ಎಂದರು.
”ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರಚನೆಯಾದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ದೇವಾಲಯದ ನಿರ್ವಹಣೆ, ಯಾತ್ರಾರ್ಥಿಗಳ ವ್ಯವಸ್ಥೆ ಹಾಗೂ ಭಕ್ತರ ಕಾಣಿಕೆಗಳ ಸುರಕ್ಷತೆಯ ಹೊಣೆಗಾರಿಕೆ ನೀಡಲಾಗಿತ್ತು. ಆದರೆ, ಟ್ರಸ್ಟ್ ತನ್ನ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲವಾಗಿ ಭಕ್ತರ ವಿಶ್ವಾಸಕ್ಕೆ ದ್ರೋಹ ಎಸಗಿದೆ” ಎಂದು ಆರೋಪಿಸಿದರು.
ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ತೀರ್ಪು ದಾರಿ ಮಾಡಿಕೊಟ್ಟಿದ್ದರೂ, ಅದರ ರಾಜಕೀಯ ಲಾಭವನ್ನು ಬಿಜೆಪಿ ಹಾಗೂ ಆರ್ಎಸ್ಎಸ್ ಪಡೆದುಕೊಂಡಿವೆ. ಈಗ ಭಕ್ತರ ಕಾಣಿಕೆ ಕಳವು ಪ್ರಕರಣದಲ್ಲಿ ಅವರು “ರೆಡ್ ಹ್ಯಾಂಡ್” ಆಗಿ ಸಿಕ್ಕಿಬಿದ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದಾರೆ. ಆರ್ಎಸ್ಎಸ್ ಮೌನವಾಗಿದೆ. ಅಮಿತ್ ಶಾ ಎಲ್ಲಿದ್ದಾರೆ? ಈ ಹಗಲು ದರೋಡೆಗೆ ಯಾರು ಹೊಣೆ ಹೊರುತ್ತಾರೆ?” ಎಂದು ಪ್ರಶ್ನಿಸಿದರು.
